ಗ್ರಂಥ - ಸಂಸ್ಕಾರಗಳು - ಏನು? ಏಕೆ? ಹೇಗೆ? ಭಾಗ ೨ ಅಷ್ಟಾಂಗ ಯೋಗ ವಿಜ್ಞಾನ ಮಂದಿರದಿಂದ, ಪ್ರಕಾಶಿತವಾಗಿರುವ ಈ ೨೪೦ ಪುಟಗಳ ಗ್ರಂಥ, ಹಿಂದೆ ಪ್ರಕಟವಾದ " ಉಪನಯನಕ್ಕೆ ಒಂದು ಕೈಪಿಡಿ" ಎಂಬ ಕಿರುಗ್ರಂಥದ ವಿಸ್ತಾರ ರೂಪವಾಗಿದೆ. ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ಅವರ ಗುರುಗಳಾದ ಶ್ರೀ ರಂಗಮಹಾಗುರುಗಳು ಅನುಗ್ರಹಿಸಿದ ದೃಷ್ಟಿಕೋಣದಲ್ಲಿ, ಸಂಸ್ಕಾರ ಕರ್ಮಗಳ ಹಿಂದೆ ಇರುವ ಮರ್ಮವನ್ನು, ವಿಶ್ಲೇಷಣಾತ್ಮಕವಾದ ಪ್ರವಚನ ಮಾಲೆಯಾಗಿ ಕರುಣಿಸಿದ್ದರು. ಗುರುಗಳ ಆಶಯ ಹಾಗೂ ಸೂತ್ರಪ್ರಾಯವಾದ "ಮರ್ಮವರಿತು ಕರ್ಮವನ್ನಾಚರಿಸು" ಎಂಬ ಮಾತನ್ನನುಸರಿಸಿ, ವಿವಿಧ ಸನ್ನಿವೇಶಗಳಲ್ಲಿ ಉಪನಯನ ಹಾಗೂ ಅಗ್ನಿಕಾರ್ಯದ ಬಗ್ಗೆ ದಯಪಾಲಿಸಿದ ಪ್ರವಚನಗಳ ವಿಷಯವನ್ನು, ಕ್ರಮಬದ್ಧವಾಗಿ ಸಂಯೋಜಿಸಿ, ಈ ಗ್ರಂಥರೂಪದಲ್ಲಿ ತರಲಾಗಿದೆ. ಆಡುಭಾಷೆಯ ಶೈಲಿಯಲ್ಲಿದ್ದು ಸುಲಭವಾಗಿಯೂ, ಸ್ಪಷ್ಟವಾಗಿಯೂ ಎಲ್ಲರಿಗೂ ಗಹನವಾದ ವಿಷಯಗಳು ಮನಮುಟ್ಟುವಂತಿದೆ. ಪರಮಪವಿತ್ರವಾದ ಉಪನಯನ ಸಂಸ್ಕಾರ, ಕಾಲಕ್ರಮೇಣ ಜಾರಿ, ಅತ್ಯಂತ ಶೋಚನೀಯ ಸ್ಥಿತಿಗೆ ಒಳಗಾಗಿರುವ ವಿಷಯವನ್ನು, ಈ ಗ್ರಂಥವು ಓದುಗರ ಗಮನಕ್ಕೆ ತರುತ್ತದೆ. ಒಂದುಕಡೆ, ಸಕಾಲದಲ್ಲಿ ಈ ಸಂಸ್ಕಾರವು ಆಚರಿಸಲ್ಪಡದೆ , "ಇಷ್ಟು ಬೇಗ ಯಾಕೆ?" "ಮದುವೆಗೆ ಮುಂಚೆ ಒಂದು ಶಾಸ್ತ್ರಮಾಡಿದರಾಯಿತು", ಎನ್ನುವ ಮಟ್ಟಕ್ಕೆ ಇಳಿಸಿ, ಮದುವೆಗೆ ಅರ್ಹತೆಯ ನಿರ್ಣಾಯಕವೆಂದು ಭಾವಿಸಿ, ಅಸಡ್ಡೆಯಿಂದ, ಕಾಟಾಚಾರಕ್ಕೆ, ಸಮಾಜದ ಭಯದಿಂದ ಮಾಡಿ ಮುಗಿಸುವುದನ್ನು ನೋಡುತ್ತಿದ್ದೇವೆ. ಮತ್ತೊಂದೆಡೆ, ತಾತನ ಕಾಲದಿಂದ ಬಂದ ಸಂಪ್ರದಾಯವೆಂದು, ಈ ಸಂಸ್ಕಾರವನ್ನು ಅನುಸರಿಸುತ್ತಿರುವವರ ಬುದ್ಧಿಗೆ ಏಳುವ ಪ್ರಶ್ನೆ/ ಸಂಶಯಗಳಿಗೆ ಪರಿಹಾರ ದೊರೆಯದೆ, ಅಂಧಶ್ರದ್ಧೆಯಿಂದ ಈ ಕರ್ಮವು ಆಚರಿಸಲ್ಪಡುತ್ತಿದೆ. ಈ ಅಂಧ ಶ್ರದ್ಧೆ ತೊಲಗಿ, ಅರ್ಥಪೂರ್ಣವಾಗಿ ಮುಂದಿನ ಪೀಳಿಗೆಯಲ್ಲಿ ಬೆಳೆದು ಫಲಿಸಿ, ಪರಮಾರ್ಥಪೂರ್ಣವಾಗಿ ಪರಿವರ್ತನೆಗೊಳ್ಳಬೇಕಾದ ಅಂಶವನ್ನು ಸ್ವಾಮಿಗಳು ಎತ್ತಿ ಹೇಳಿದ್ದಾರೆ. ಸಮಾಜದಲ್ಲಿ ಕೇಳಿಬರುವ ಟೀಕೆಗಳನ್ನು ಉತ್ತರಿಸಿ, ಈ ಸಂಸ್ಕಾರದ ಮಹತ್ತಾದ ಉದ್ದೇಶ ಹಾಗೂ ಉತ್ತಮ ಫಲಪ್ರಾಪ್ತಿಯನ್ನೂ ಬೋಧಮಾಡಿ, ಎಲ್ಲರ ಕುತೂಹಲವನ್ನು ತಣಿಸಿದ್ದಾರೆ. ಪಠ್ಯವಸ್ತುವನ್ನು ೬ ಅಧ್ಯಾಯಗಳಾಗಿ ವಿಂಗಡಿಸಿ, ಮೊದಲಿಗೆ ಪೀಠಿಕೆ ಹಾಗೂ ಟೀಕೆಗಳಿಗೆ ಸಮಾಧಾನವನ್ನು ಕೊಡಲಾಗಿದೆ. ಎರಡನೆಯ ಅಧ್ಯಾಯದಲ್ಲಿ ಉಪನಯನಕ್ಕೆ ಅಧಿಕಾರಿ ಯಾರು? ಸ್ತ್ರೀಯರಿಗೆ ಯಜ್ಞೋಪವೀತ ಉಂಟೇ? ಇತ್ಯಾದಿ ವಿಷಯಗಳಿಗೆ ಉತ್ತರವಿದೆ. ಮೂರು, ನಾಲ್ಕನೆಯ ಅಧ್ಯಾಯಗಳಲ್ಲಿ, ಮಂತ್ರ-ತಂತ್ರಗಳು ಹಾಗೂ ಯಜ್ಞೋಪವೀತ ತಯಾರಿಕೆಯ ವಿಷಯಗಳನ್ನು ತಿಳಿಸಿಕೊಡಲಾಗಿದೆ. ಐದನೆಯ ಅಧ್ಯಾಯದಲ್ಲಿ ಮಂತ್ರ, ಗಾಯತ್ರಿ ಇವುಗಳ ಶಬ್ದಾರ್ಥ, ಗಾಯತ್ರೀ ಧ್ಯಾನ, ಗಾಯತ್ರೀ ಪ್ರತಿಪಾದ್ಯನು ಸವಿತೃ ದೇವನಾದರೆ ಸ್ತ್ರೀರೂಪದ ಧ್ಯಾನವೇಕೆ? ಇತ್ಯಾದಿ ವಿಷಯಗಳನ್ನು ವಿಸ್ತಾರವಾಗಿ ತಿಳಿಸಿಕೊಡಲಾಗಿದೆ. ಆರನೆಯ ಅಧ್ಯಾಯವು ಅಗ್ನಿಕಾರ್ಯ/ ಸಮಿಧಾದಾನಕ್ಕೆ ಮೀಸಲಾಗಿದೆ. ಗಾಯತ್ರಿ, ಸಾವಿತ್ರಿ ಇತ್ಯಾದಿ ಹೆಸರಿನಿಂದ ಕರೆಯಲ್ಪಡುವ ಮಹಾಮಾತೆಯ ಮತ್ತುಹೃದಯಕ್ಕೆ ಬೆಳಕಾಗಿರುವ ಪರಂಜ್ಯೋತಿಯ ಪೂಜೆಗೆ ಅಧಿಕಾರಸಂಪತ್ತನ್ನು ಕೊಡುವ ಶುಭ ಕರ್ಮವೆಂದೂ, ನಮ್ಮ ಅಂತರಂಗದ ಕೊಳೆಯನ್ನು ತೊಲಗಿಸಿ, ಭಗವಂತನತ್ತ ಕರೆದೊಯ್ಯುವ ಶ್ರೇಷ್ಠವಾದ ಸಂಸ್ಕಾರವಿದು ಎನ್ನುವ ತಾತ್ಪರ್ಯವನ್ನು ತಿಳಿಸುತ್ತಾ, ೨೪ ಘಂಟೆಗಳಲ್ಲಿ ಸಂಧ್ಯಾಕರ್ಮಾಚರಣೆಗೆ ಕೆಲವು ನಿಮಿಷಗಳನ್ನಾದರೂ ಅವಶ್ಯವಾಗಿ ಮೀಸಲಾಗಿಟ್ಟರೆ, ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಉತ್ತಮ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ ಸ್ವಾಮಿಗಳು. ಅವರ ಈ ಭಗವತ್ಸೇವಾರೂಪವಾದ ಪ್ರವಚನದ ಸಾರಾಂಶದಿಂದ ಕೂಡಿದ ಈ ಹೊತ್ತಿಗೆಯು, ಅಧ್ಯಾತ್ಮದಲ್ಲಿ ಉತ್ಸುಕತೆ ಇರುವವರೆಲ್ಲರೂ ಅಗಾಗ ಓದಬೇಕಾದ ಉಪಯುಕ್ತ ಸಂಗ್ರಹ ಗ್ರಂಥವಾಗಿದೆ.